ಮಂಗಳವಾರ, ಆಗಸ್ಟ್ 2, 2011

ಕಾಳಿಂಗನ ಸಂಸಾರಕ್ಕೆ ಇನ್ನಷ್ಟು ಸದಸ್ಯರು!


ಮಂಗಳೂರು ನಗರದ ಪಿಲಿಕುಳ ಜೈವಿಕ ಉದ್ಯಾನವನದ ಕಾಳಿಂಗನ ಸಂಸಾರಕ್ಕೆ ಇದೀಗ ಹೊಸ ಖದರ್ ಬಂದಿದೆ.
ಇಲ್ಲಿ ಸಂರಕ್ಷಿಸಲ್ಪಡುತ್ತಿರುವ ಕಾಳಿಂಗ ಸರ್ಪಗಳ ಪೈಕಿ ನಾಗವೇಣಿ, ನಾಗಮಣಿ ಹಾಗೂ ರಾಣಿ ಎಂಬ ಮೂರು ಸರ್ಪಗಳು ಕಳೆದ ಮೇ ತಿಂಗಳಲ್ಲಿ ಒಟ್ಟು 82 ಮೊಟ್ಟೆಗಳಿರಿಸಿದ್ದವು.
ಇದೀಗ 82 ದಿನಗಳ ಬಳಿಕ ಮೊಟ್ಟೆಯೊಡೆಯಲಾರಂಭಿಸಿದ್ದು, ಇದುವರೆಗೆ 32 ಮೊಟ್ಟೆಗಳಿಂದ ಪುಟಾಣಿ ಕಾಳಿಂಗಗಳು ಹೊರಬಂದು ಹರಿದಾಡಲಾರಂಭಿಸಿವೆ.
ಇನ್ನೊಂದಿಷ್ಟು ದಿನದಲ್ಲಿ ಉಳಿದ ಮೊಟ್ಟೆಗಳಿಂದಲೂ ಮರಿಗಳು ಹೊರಬರುವ ನಿರೀಕ್ಷೆ ಹೊಂದಲಾಗಿದೆ.

ವಿಶ್ವದಲ್ಲೇ ಮೊದಲು!
ಲಭ್ಯವಿರುವ ಮಾಹಿತಿಗಳ ಪ್ರಕಾರ ಇಂತಹಾ ವಿದ್ಯಮಾನ ವಿಶ್ವದಲ್ಲಿ ಇದೇ ಮೊದಲು.
ಕಾಳಿಂಗ ಸರ್ಪಗಳು ಸಾಮಾನ್ಯವಾಗಿ ಕಾಡುಗಳಲ್ಲಿ ಹೊರತುಪಡಿಸಿದರೆ ಯಾವುದೇ ಜೈವಿಕ ಉದ್ಯಾನವನಗಳಲ್ಲಿ ಸಂತಾನೋತ್ಪತ್ತಿ ಮಾಡುವುದಿಲ್ಲ. ಆದರೆ ಪಿಲಿಕುಳದಲ್ಲಿ ಕಾಳಿಂಗ ಸರ್ಪಕ್ಕಾಗಿಯೇ ಕೃತಕವಾಗಿ ಕಾಡಿನ ವಾತಾವರಣ ನಿರ್ಮಿಸಲಾಗಿದ್ದು. ಈ ಮೂಲಕ ಅಳಿವಿನಂಚಿನಲ್ಲಿರುವ ಪ್ರಕೃತಿಯ ಅಪರೂಪದ ಪ್ರಬೇಧವೊಂದನ್ನು ಬೆಳೆಸುತ್ತಿರುವ ಕೀರ್ತಿ ಈಗ ಪಿಲಿಕುಳಕ್ಕೆ ಸಂದಿದೆ.
ಅತ್ಯಂತ ಉದ್ದ ಸರ್ಪ ಪ್ರಬೇಧವಾಗಿರುವ ಕಾಳಿಂಗಗಳು ಅಪಾಯಕಾರಿ ವಿಷ ಹೊಂದಿರುತ್ತದೆ. ಇವುಗಳು ಮೊಟ್ಟೆ ಇರಿಸಿದ ನಂತರದ 70 ರಿಂದ 90 ದಿನಗಳ ಅವಧಿಯಲ್ಲಿ ಮರಿಗಳು ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ.
ಕಾಡಿನಲ್ಲಿ ಇವುಗಳ ಸಂತಾನೋತ್ಪತ್ತಿ ಸಹಜವಾದರೂ. ಜೈವಿಕ ಉದ್ಯಾನವನಗಳಲ್ಲಿ ಸಾಕುವ ಕಾಳಿಂಗಗಳು ಮೊಟ್ಟೆ ಇಡುವುದು ಅಪರೂಪ. ಆದರೆ ಪಿಲಿಕುಳದಲ್ಲಿ ತರಗೆಲೆ, ಮರಗಳು, ಅಡಗುದಾಣಗಳು, ಬಿಲಗಳನ್ನು ನಿರ್ಮಿಸಿ ಕಾಡಿನ ವಾತಾವರಣ ಕಲ್ಪಿಸಿಕೊಟ್ಟಿದ್ದುದರಿಂದ ಇದು ಸಾಧ್ಯವಾಗಿದೆ.

ಈ ಹಿಂದೆ ಕೂಡಾ ಕಾಳಿಂಗವೊಂದು ಇಲ್ಲಿ ಮೊಟ್ಟೆ ಇರಿಸಿತ್ತು. ಆದರೆ ಯಾವುದೇ ಮರಿಯಾಗಿರಲಿಲ್ಲ. ಬಳಿಕ ಇಲ್ಲಿನ ಅಧಿಕಾರಿಗಳು ಇದನ್ನು ಸವಾಲಾಗಿ ಸ್ವೀಕರಿಸಿದ್ದರು. ಇದೀಗ ಅವರ ಶ್ರಮ ಸಾರ್ಥಕವಾಗಿದೆ.
ಮರಿಗಳು ಪೂರ್ತಿಯಾಗಿ ಹೊರಬಂದ ಬಳಿಕ ಕೆಲವನ್ನಷ್ಟೇ ಉಳಿಸಿಕೊಂಡು ಮಿಕ್ಕವುಗಳನ್ನು ಸೂಕ್ತಪ್ರದೇಶಕ್ಕೆ ಬಿಡುವ ಬಗ್ಗೆ ಪಿಲಿಕುಳ ಅಧಿಕಾರಿಗಳು ಚಿಂತಿಸಿದ್ದಾರೆ.
ಅಂದಹಾಗೆ ಈ ನಿಸರ್ಗಧಾಮದಲ್ಲಿ ಒಟ್ಟು 14 ಕಾಳಿಂಗ ಸರ್ಪಗಳಿವೆ!
ಇವುಗಳ ಪೈಕಿ 9 ಹೆಣ್ಣಾದರೆ 5 ಗಂಡು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ