ಶುಕ್ರವಾರ, ಆಗಸ್ಟ್ 12, 2011

ಕಡಲ ಮಕ್ಕಳ ರಜೆ ಮುಗಿಯಿತು...!

ಕಡಲ ಮಕ್ಕಳು ಮತ್ತೆ ತಮ್ಮ ಕಾಯಕದತ್ತ ಮುಖ ಮಾಡಿದ್ದಾರೆ.
ಐವತ್ತೇಳು ದಿನಗಳ ಸುದೀರ್ಘ ರಜೆಯ ಬಳಿಕ ಬುಧವಾರ ಅರಬ್ಬಿ ಕಡಲಲ್ಲಿ ಮತ್ತೆ ಮತ್ಸ್ಯ ಬೇಟೆ ಆರಂಭಗೊಂಡಿದ್ದು ಕರಾವಳಿಯಲ್ಲಿ ಮೀನುಗಾರಿಕಾ ಋತು ಆರಂಭಗೊಂಡಂತಾಗಿದೆ.
ಅತ್ತ ಅರಬ್ಬಿ ಕಡಲಿಗೆ ಒಂದೊಂದಾಗಿ ಮೀನುಗಾರಿಕಾ ಬೋಟ್ ಗಳು ಇಳಿಯುತ್ತಿದ್ದರೆ, ಇತ್ತ ಮೀನುಗಾರಿಕಾ ಬಂದರ್ ನಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ.
ಈ ಬಾರಿ ಮೀನುಗಾರಿಕೆಯಲ್ಲಿ ತೊಡಗಲಿರುವ ದೋಣಿಗಳ ಪೈಕಿ ಯಾಂತ್ರೀಕೃತ ಸಣ್ಣ ದೋಣಿಗಳ ಸಂಖ್ಯೆ ಹೆಚ್ಚು. ಸುಮಾರು ಎರಡು ಸಾವಿರಕ್ಕೂ ಅಧಿಕ ಮೀನುಗಾರಿಕಾ ದೋಣಿಗಳಲ್ಲಿ 65 ಪರ್ಸಿಯನ್ ಬೋಟ್, 900 ಟ್ರಾಲ್ ಬೋಟ್, 1100 ಮೋಟಾರು ಬೋಟ್ ಗಳು ಸೇರಿದ್ದು, ಇವೆಲ್ಲ ಮೀನುಗಾರಿಕೆಗೆ ತೆರಳಿವೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
ಆಳ ಸಮುದ್ರ ಮೀನುಗಾರಿಕೆ ದೋಣಿಗಳು ಒಂದು ವಾರದ ಮೊದಲೇ ಸಮುದ್ರಕ್ಕಿಳಿದಿದೆ. ಕೆಲವು ಸಮುದ್ರ ಮೀನುಗಾರರು ಆ.13 ರಂದು ಸಮುದ್ರ ಪೂಜೆ ನೆರವೇರಿಸಿ ಬಳಿಕ ಮೀನುಗಾರಿಕೆಗೆ ಇಳಿಯಲಿದ್ದಾರೆ.
ಕರ್ನಾಟಕ ಸಮುದ್ರ ಮೀನುಗಾರಿಕಾ ಕಾಯ್ದೆ 1986ರ ಅನ್ವಯ ರಾಜ್ಯ ಸರಕಾರ ಜೂ.15 ರಿಂದ ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧವಿಧಿಸಿ ರಜೆ ಘೋಷಿಸಿತ್ತು. ಈ ಅವಧಿ ಮೀನುಗಳ ಸಂತಾನೋತ್ಪತ್ತಿ ಕಾಲವಾಗಿದೆಯಲ್ಲದೆ ವಾತಾವರಣದಲ್ಲೂ ಏರುಪೇರು ಇರುವುದರಿಂದ ಈ ಅವಧಿಯನ್ನು ರಜೆ ಎಂದು ಘೋಷಿಸಲಾಗುತ್ತದೆ.
ಇದೀಗ ರಜೆಯ ಕಾಲ ಮುಕ್ತಾಯಗೊಂಡಿದ್ದು ವಾತಾವರಣವೂ ತಿಳಿಯಾಗಿರುವುದರಿಂದ ಮೀನುಗಾರರು ಸಂತಸದಿಂದಲೇ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಈ ಬಾರಿ ಹೆಚ್ಚು ಮೀನಿನ ಇಳುವರಿ ಸಿಗುವ ನಿರೀಕ್ಷೆ ಅವರದು.!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ