ಶನಿವಾರ, ಆಗಸ್ಟ್ 20, 2011

ನೋಟಿನ ಮಾಲೆ, ಚಕ್ಕುಲಿ, ಲಡ್ಡು!

ನಾಳೆ ಬೆಳಗಾದರೆ ಪೊಡವಿಗೊಡೆಯನ ನೆಲೆವೀಡು ಉಡುಪಿಯಲ್ಲಿ ಸಂಭ್ರಮವೋ ಸಂಭ್ರಮ.
ಅದಕ್ಕೆ ಕಾರಣ ಕಿಟ್ಟಣ್ಣನ ಜನ್ಮದಿನ.
ಈಗಾಗಲೇ ಶ್ರೀಕೃಷ್ಣ ಮಠದಲ್ಲಿ ಅದಕ್ಕಾಗಿ ಭರದ ತಯಾರಿ ಪೂರ್ಣಗೊಂಡಿದೆ.
ಒಂದೆಡೆ ವಿಟ್ಲಪಿಂಡಿಯಂದು ರಥಬೀದಿಯಲ್ಲಿ ಮೊಸರು ಕುಡಿಕೆ ಒಡೆಯಲು ಕುಡಿಕೆ ಕಟ್ಟುವ ಕಾರ್ಯ ಭರದಿಂದ ಸಾಗುತ್ತಿದ್ದರ, ಇನ್ನೊಂದೆಡೆ ಕೃಷ್ಣನ ದರ್ಶನಕ್ಕಾಗಿ ಬರುವ ಲಕ್ಷಾಂತರ ಭಕ್ತಾದಿಗಳಿಗೆ ವಿತರಿಸಲು ಚಕ್ಕುಲಿ, ಲಡ್ಡುಗಳ ತಯಾರಿಕೆಯ ಕಾರ್ಯ ವೇಗ ಪಡೆದುಕೊಂಡಿದೆ.

ಭಕ್ತರಿಗೆ ಚಕ್ಕುಲಿ, ಲಡ್ಡು ಪ್ರಸಾದವಾಗಿ ವಿತರಿಸುವುದು ಇಲ್ಲಿನ ರೂಢಿ, ಅದಕ್ಕಾಗಿಯೇ 75 ಸಾವಿರ ಲಡ್ಡು ಹಾಗೂ 1.5 ಲಕ್ಷ ಚಕ್ಕುಲಿ ತಯಾರಿ ಕಾರ್ಯ ವಾರದ ಹಿಂದೆಯೇ ಶುರುವಾಗಿದೆ. ಸುಮಾರು 15 ಮಂದಿ ಅಡುಗೆ ಭಟ್ಟರು ಈ ಕಾಯಕದಲ್ಲಿ ತೊ‌ಡಗಿಕೊಂಡಿದ್ದಾರೆ. ಇದಕ್ಕೆ ನೇತೃತ್ವವನ್ನು ಖುದ್ದು ಪರ್ಯಾಯ ಶೀರೂರು ಮಠಾಧೀಶರೇ ವಹಿಸಿಕೊಂಡಿದ್ದಾರೆ. ಭಕ್ತರಿಗೆ ಹಂಚಲ್ಪಡುವ ಈ ಪ್ರಸಾದ ತಯಾರಿಕೆಯಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ. ಜಗದೋದ್ಧಾರನಿಗೆ ಇದೇ ತಿಂಡಿಗಳನ್ನು ಮೊದಲು ನೈವೇದ್ಯ ಮಾಡಲಾಗುತ್ತದೆ.
ನಾಳೆಯ ಕಾರ್ಯಕ್ರಮಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಮೊಸರು ಕುಡಿಕೆ ಒಡೆಯವುದು, ಮಲ್ಲಗಂಬ ಏರುವುದು, ಹುಲಿವೇಷ ಸ್ಪರ್ಧೆಗಳು ಕಣ್ಣಿಗೆ ಹಬ್ಬಉಂಟುಮಾಡುತ್ತದೆ. ಹುಲಿ ವೇಷ ಇಲ್ಲಿನ ವಿಶೇಷ ಆಕರ್ಷಣೆಯಾಗಿದ್ದು, ಈ ಹುಲಿ ವೇಷಧಾರಿಗಳಿಗೆ ಸ್ವಾಮೀಜಿಗಳೇ ಖರ್ಚು ಭರಿಸುತ್ತಾರಲ್ಲದೆ ನೋಟಿನ ಮಾಲೆಯನ್ನೇ ಹಾಕಿ ಗೌರವಿಸುತ್ತಾರೆ.
ಅಂತೂ ಉಡುಪಿಯಲ್ಲಿ ಹಬ್ಬ ಜೋರಿರುತ್ತದೆ.
ಪುರುಸೋತ್ತಾದರೆ ನೀವೂ ಬನ್ನಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ